ಕ್ರಿಸ್ತಶಕ ಹದಿನೇಳು ಹದಿನೆಂಟನೇ ಶತಮಾನದಲ್ಲಿ ಮೈಸೂರ್ ಮಿಷನ್ ಎಂಬ ಹೆಸರಿನಲ್ಲಿ ಕ್ರಿಸ್ತುವ ತತ್ವಗಳನ್ನು ಬಿತ್ತಲು ಬಂದ ಜೆಸ್ವಿತ್ ಮಿಷನರಿಗಳ ಸೇವಾಕಾರ್ಯಗಳ ಬಗ್ಗೆ ಬರೆಯಲಾದ ಜೆಸ್ವಿತ್ ಪತ್ರಗಳ ಆಧಾರದಲ್ಲಿ ಆ ಸಂದರ್ಭದಲ್ಲಿ ನಡೆದ ವಿದ್ಯಮಾನಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ.
ಕ್ಷೇತ್ರಕಾರ್ಯಕ್ಕಾಗಿ ಪ್ರಪಂಚದಾದ್ಯಂತ ತೆರಳಿದ್ದ ಯೇಸುಸಭೆ ಅಥವಾ ಜೆಸ್ವಿತ್ ಮಿಷನರಿಗಳು ರೋಮ್ ನಗರದಲ್ಲಿನ ಕೇಂದ್ರಕಚೇರಿಗೆ ತಮ್ಮ ಕಾರ್ಯಕಲಾಪಗಳ ಕುರಿತಂತೆ ವಾರ್ಷಿಕ ವರದಿಗಳನ್ನು ತಪ್ಪದೇ ಕಳಿಸಬೇಕಿತ್ತು. ಜೆಸ್ವಿತ್ ಮಿಷನರಿಗಳು ವಿಶ್ವಿದ್ಯಾಲಯಗಳಲ್ಲಿ ಓದಿದ ಮೇಧಾವಿಗಳಾಗಿದ್ದರು. ಅದರಲ್ಲೂ ಕೆಲವರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೂ ಆಗಿದ್ದು ಧರ್ಮಸೇವೆಯತ್ತ ಒಲಿದು ತಮ್ಮ ಐಶಾರಾಮದ ಜೀವನ ತ್ಯಜಿಸಿ ತೃತೀಯ ರಾಷ್ಟ್ರಗಳ ದುರ್ಗಮ ಹಳ್ಳಿಗಾಡುಗಳಲ್ಲಿ ಕಷ್ಟತಮ ಜೀವನ ನಡೆಸುವುದನ್ನು ಆಯ್ಕೆ ಮಾಡಿಕೊಂಡಿದ್ದರು. ಅವರಿಗೆ ಭೂಗೋಳಶಾಸ್ತ್ರ, ಖಗೋಳವಿಜ್ಞಾನ, ಸಮಾಜಶಾಸ್ತ್ರ, ವಾಸ್ತುಶಿಲ್ಪ, ಸಾಮಾನ್ಯ ವಿಜ್ಞಾನಗಳ ಅಪಾರ ಪರಿಚಯವಿದ್ದುದರಿಂದ ತಾವು ನೆಲೆನಿಂತ ನಾಡುಗಳಲ್ಲಿನ ಆಚಾರವಿಚಾರಗಳು, ಜನಜೀವನ, ವೈದ್ಯವೃತ್ತಿ, ಜನಪದ ನಂಬಿಕೆಗಳು ಮುಂತಾದವನ್ನು ಸೂಕ್ಷ್ಮವಾಗಿ ಅರಿತುಕೊಳ್ಳಲು ಅನುವಾಯಿತು. ಈ ಹಿನ್ನೆಲೆಯಲ್ಲಿ ಅವರ ವರದಿಗಳು ಸಮಕಾಲೀನ ಜನಜೀವನದ ಸ್ಥಿತಿಗತಿ, ಆಡಳಿತವ್ಯವಸ್ಥೆಗಳ ಸೋಲುಗೆಲವುಗಳು, ಲೋಪದೋಷಗಳು, ಸಹಿಷ್ಣುತೆ ಅಸಹಿಷ್ಣುತೆಗಳು, ರೋಗನಿದಾನ, ಶಿಕ್ಷಣಕ್ಷೇತ್ರ, ಆಹಾರಪದ್ಧತಿಗಳ ಮೇಲೆ ವಿವಿಧ ಜನವರ್ಗಗಳು ಹೊಂದಿದ್ದ ಹಿಡಿತಗಳು ಮುಂತಾದವುಗಳಿಗೆ ಕನ್ನಡಿ ಹಿಡಿಯುತ್ತವೆ.
ಸಾಮಾನ್ಯವಾಗಿ ರಾಜರ ಚರಿತ್ರೆಗಳು ಅವರ ಆಸ್ಥಾನದಲ್ಲಿ ಉದ್ಯೋಗ ಪಡೆದ ಚರಿತ್ರೆಕಾರರಿಂದ ದಾಖಲಾಗಿದ್ದು, ಆ ಚರಿತ್ರಕಾರರಿಗೆ ರಾಜನ ಅನ್ನದಋಣ ಇರುವುದುದರಿಂದ ಅವರ ಬರಹಗಳು ರಾಜನಿಗೆ ನಿಷ್ಠವಾಗಿರುತ್ತವೆ. ಅವರು ರಾಜನ ಗೆಲುವನ್ನಷ್ಟೇ ದಾಖಲಿಸುತ್ತಾರೆ ಹೊರತು ಸೋಲುಗಳನ್ನೂ ಬಲಹೀನತೆಗಳನ್ನೂ ತೋರಿಸುವುದಿಲ್ಲ. ಆದರೆ ಜೆಸ್ವಿತ್ ವರದಿಗಳು ವಸ್ತುನಿಷ್ಠವಾಗಿದ್ದು ತಮ್ಮ ದೈನಂದಿನ ಧರ್ಮಪ್ರಚಾರದ ಮಿಷನರಿ ದಿನಚರಿಯ ನಡುವೆ ತಾವು ಕಂಡು ಕೇಳಿದ ಅನಭವಿಸಿದ ವರದಿಗಳನ್ನು ನೀಡುತ್ತಾ ಸ್ಥಳೀಯ ಆಚಾರ ವಿಚಾರಗಳು, ಆಡುನುಡಿಗಳು, ರಾಜರ ಸಾಮಂತರ ಪಾಳೇಗಾರರ ನಡವಳಿಕೆಗಳು, ಮಳೆಬೆಳೆ ಇತ್ಯಾದಿಗಳನ್ನು ದಾಖಲಿಸಿರುವುದರಿಂದ ಅವು ಸಮಕಾಲೀನ ಇತಿಹಾಸದ ಅಧ್ಯಯನಕ್ಕೆ ಪ್ರಮುಖ ಆಕರವಾಗುತ್ತವೆ.
ಜೆಸ್ವಿತ್ ಪತ್ರಗಳು ಅಥವಾ ಜೆಸ್ವಿತ್ ಆನ್ನಲ್ಸ್ ಎಂದು ಕರೆಸಿಕೊಳ್ಳುವ ಈ ವಾರ್ಷಿಕ ವರದಿಗಳೆಲ್ಲ ನಮ್ಮ ದೇಶದಿಂದ ಹೊರಗೆ ಇಟಲಿಯಲ್ಲಿನ ವ್ಯಾಟಿಕನ್ ಪತ್ರಾಗಾರದಲ್ಲೂ ರೋಮ್ ನಗರದ ಜೆಸ್ವಿತ್ ಪತ್ರಾಗಾರದಲ್ಲೂ ಸಂಗ್ರಹವಾಗಿವೆ. ವಿಶೇಷವೆಂದರೆ ಇವನ್ನು ಅಂದಿನ ಚಲಾವಣೆಯ ಭಾಷೆಗಳಾಗಿದ್ದ ಲ್ಯಾಟಿನ್, ಪೋರ್ಚುಗೀಸ್, ಸ್ಪಾನಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಬರೆಯಲಾಗಿದೆ.
ಹದಿನಾರನೇ ಶತಮಾನದಲ್ಲಿ ಇಂಡಿಯಾ ದೇಶಕ್ಕೆ ಬಂದ ಜೆಸ್ವಿತರು ಗೋವಾದಲ್ಲಿ ತಮ್ಮ ಪ್ರಧಾನ ಕಚೇರಿ ಹೊಂದಿದ್ದು ಅಲ್ಲಿಂದಲೇ ದಕ್ಷಿಣ ಇಂಡಿಯಾದ ವಿವಿಧ ಪ್ರದೇಶಗಳಿಗೆ ತೆರಳಿ ಧರ್ಮಪ್ರಚಾರ ಕಾರ್ಯಕ್ಕೆ ತೊಡಗಿದರು. ತಮ್ಮ ಅನುಕೂಲಕ್ಕಾಗಿ ಅವರು ದಕ್ಷಿಣ ಇಂಡಿಯಾವನ್ನು ನಾಲ್ಕು ಭಾಷಾ ಪ್ರದೇಶಗಳನ್ನಾಗಿ ವಿಭಜಿಸಿಕೊಂಡರು. ಮಲಯಾಳ ಮಾತನಾಡುವ ಪ್ರದೇಶವಾದ ಮಲಬಾರ್ ಮಿಷನ್, ತಮಿಳು ಭಾಷಿಕ ಪ್ರಾಬಲ್ಯದ ಮಧುರಾ ಮಿಷನ್, ಕನ್ನಡ ಮಾತನಾಡುವ ನಾಡಾದ ಮೈಸೂರು ಮಿಷನ್ ಹಾಗೂ ಕೋಲಾರ ಜಿಲ್ಲೆಯಿಂದ ಪೂರ್ವ ಕರಾವಳಿಯವರೆಗಿನ ತೆಲುಗು ಭಾಷಾ ಪ್ರಾಬಲ್ಯದ ಕರ್ನಾಟಿಕ್ ಮಿಷನ್.
*
ಅದು ಹದಿನೆಂಟನೇ ಶತಮಾನದ ಪ್ರಾರಂಭದ ದಿನಗಳು. ಶ್ರೀರಂಗಪಟ್ಟಣದಲ್ಲಿ ಕ್ರೈಸ್ತಧರ್ಮ ಕಾಲಿಟ್ಟು ಐವತ್ತು ವರ್ಷಗಳೇ ಆಗಿದ್ದವು. ಅಲ್ಲಿಂದ ಮುಂದೆ ಗಾಡೇನಹಳ್ಳಿ, ಮಗ್ಗೆ, ಹಾರೋಬೆಲೆ, ಕಾಮನಹಳ್ಳಿ ಮುಂತಾದ ಊರುಗಳಲ್ಲಿ ಮಿಷನ್ ಕೇಂದ್ರಗಳು ಹಾಗೂ ಗುರುನಿವಾಸಗಳು ಸ್ಥಾಪಿತವಾಗಿ ಅಲ್ಲೆಲ್ಲ ಕ್ರೈಸ್ತರ ಜನಸಂಖ್ಯೆ ಗಣನೀಯವಾದ ಗಾತ್ರಕ್ಕೆ ಬೆಳೆದಿತ್ತು. ಗುರುನಿವಾಸಗಳಲ್ಲಿ ಗುರುಸ್ವಾಮಿಯವರು ಪೂಜಾವಸ್ತ್ರಗಳು, ಪೂಜಾಪರಿಕರಗಳು, ರಾಜರಿಗೆ ಅಥವಾ ಸ್ಥಳೀಯ ನಾಯಕರಿಗೆ ಕೊಡಬೇಕಾದ ಕಾಣಿಕೆಗಳು, ಅವರಿಂದ ಪಡೆದ ಉಡುಗೊರೆಗಳು, ಕ್ರಿಸ್ತುವರ ಮದುವೆ ಮತ್ತು ದೀಕ್ಷಾಸ್ನಾನದ ದಸ್ತಾವೇಜುಗಳು, ವರದಿಪುಸ್ತಕಗಳು ಮುಂತಾದ ಅಮೂಲ್ಯ ವಸ್ತುಗಳನ್ನು ಸಂರಕ್ಷಿಸಿಟ್ಟು ನಂಬಿಗಸ್ಥ ಉಪದೇಶಿಗಳನ್ನು ಅದರ ಕಾವಲಿಗೆ ನೇಮಿಸಿ ತಾವು ಕ್ಷೇತ್ರಕಾರ್ಯಗಳಿಗೆ ತೆರಳುತ್ತಿದ್ದರು.
*
ಮೈಸೂರು ರಾಜ್ಯವನ್ನು ಎರಡನೇ ಕಂಠೀರವ ನರಸರಾಜ ಒಡೆಯ ಮಹಾರಾಜರು ರಾಜಧಾನಿ ಶ್ರೀರಂಗಪಟ್ಟಣದಿಂದ ಆಳುತ್ತಿದ್ದ ಸಮಯ. ಅವರು ಮೂಗರಾಗಿದ್ದುದರಿಂದ ಅವರನ್ನು ಮೂಕರಸ ಎಂದೂ ಕರೆಯಲಾಗುತ್ತಿತ್ತು. ವಾಸ್ತವವಾಗಿ ಮಹಾರಾಜ ಒಡೆಯರ ಪರವಾಗಿ ಅವರ ದಳವಾಯಿ ರಾಜ್ಯಭಾರ ನಡೆಸುತ್ತಿದ್ದ. ಯುದ್ಧಗಳಿಲ್ಲದೆ ರಾಜ್ಯವು ಶಾಂತವಾಗಿತ್ತು. ಆದರೆ ಹಳ್ಳಿಗಳಲ್ಲಿ ಯಥಾಪ್ರಕಾರ ಮಳೆಯ ಕೊರತೆ, ಜಾನುವಾರುಗಳ ರೋಗ, ದಿನನಿತ್ಯದ ಜಗಳಗಳು ಇದ್ದವು. ಸಮಾಧಾನವೆಂದರೆ ಕ್ರಿಸ್ತಭಕ್ತರ ನಡವಳಿಕೆ ಮೆಚ್ಚುವಂತದ್ದಾಗಿತ್ತು. ಅವರೆಲ್ಲ ತಪ್ಪದೇ ಬಲಿಪೂಜೆ, ನವೇನ, ಜಪಸರ, ಸಂಸ್ಕಾರಗಳಲ್ಲಿ ಭಾಗವಹಿಸುತ್ತಿದ್ದರು.
ವಿಪರ್ಯಾಸವೆಂದರೆ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿತ್ತು. ಅಲ್ಲೊಂದು ಪುಟ್ಟ ಚರ್ಚ್ ಇತ್ತಲ್ಲದೆ ಗುರುಸ್ವಾಮಿಯವರು ತಂಗಲು ಮೊದಲ ಮಿಷನರಿ ಗುರು ಲಿಯೊನಾರ್ಡೊ ಚಿನ್ನಮಿಯವರು ಕಟ್ಟಿಸಿದ್ದ ಒಂದು ಮನೆಯೂ ಇತ್ತು. ಮಿಷನ್ ಯಾತ್ರೆಗಳಲ್ಲಿ ತೊಡಗಿರುತ್ತಿದ್ದ ಗುರುಸ್ವಾಮಿಗಳು ಅಲ್ಲಿ ಅಪರೂಪಕ್ಕೆ ತಂಗುತ್ತಿದ್ದರು. ಉಳಿದಂತೆ ಗುರುಮನೆ ಹಾಗೂ ಗುಡಿಗಳನ್ನು ಕೇಳುವವರಿಲ್ಲದೆ ಅದು ಪುಂಡು ಪೋಕರಿಗಳ ಆವಾಸವಾಯಿತು. ಪಟ್ಟಣದ ಜನರೂ ಹಳೆಯ ಮೂಢನಂಬಿಕೆಗಳಿಗೆ ಆತುಕೊಂಡು ಕ್ರೈಸ್ತಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಹಾಗಾಗಿ ಗುರುಮನೆ ಹಾಗೂ ದೇವಾಲಯವನ್ನು ರಾಜನು ವಶಕ್ಕೆ ತೆಗೆದುಕೊಂಡ.
ಹೀಗಿರುವಲ್ಲಿ ೧೭೦೯ರಲ್ಲಿ ಫಾದರ್ ಅಂತೊನಿಯೊ ಮರಿಯಾ ಪ್ಲಾಟೆ (Fr Antonio Maria Platei, SJ) ಎಂಬ ಗುರುಸ್ವಾಮಿಯವರು ಪಟ್ಟಣಕ್ಕೆ ಆಗಮಿಸಿದರು. ಪ್ಲಾಟೆ ಸ್ವಾಮಿಯವರು ಹಸನ್ಮುಖಿ ಸ್ಪುರದ್ರೂಪಿ ಯುವಕ. ಎತ್ತರದ ಆಳು, ಗಂಭೀರ ನಡಿಗೆ ಹಾಗೂ ಸದಾ ಮಗುವಿನಂತ ಮುಗ್ದ ನಗು ಚೆಲ್ಲುವ ಸುಂದರ ಮೊಗ. ಎಂಥ ಸಿಡುಕು ಮೋರೆಯ ಕ್ರೂರಮನಸಿನವರನ್ನೂ ಬದಲಿಸಿಬಿಡಬಲ್ಲ ಹೊಳಪು ಅವರ ಕಂಗಳಲ್ಲಿತ್ತು. ರಾಜ್ಯಾಳ್ವಿಕೆ ನಡೆಸುತ್ತಿದ್ದ ದಳವಾಯಿಯವರನ್ನು ಕಂಡು ತಮ್ಮ ಮನೆಯನ್ನು ಬಿಡಿಸಿಕೊಳ್ಳಲು ಅವರು ಅರಮನೆಯತ್ತ ಹೆಜ್ಜೆ ಹಾಕಿದರು. ದಳವಾಯಿಯು ಪ್ಲಾಟೆ ಸ್ವಾಮಿಯವರನ್ನು ರತ್ನಗಂಬಳಿ ಹಾಸಿ ಬಲು ಆಪ್ತವಾಗಿ ಬರಮಾಡಿಕೊಂಡ. ಉಭಯ ಕುಶಲೋಪರಿಯ ಆನಂತರ ಮನೆಯೇನೋ ಮರಳಿ ಬಂತು ಆದರೆ ಗುಡಿ ಸಿಕ್ಕಲಿಲ್ಲ. ವಿಧಿಯಿಲ್ಲದೆ ಪ್ಲಾಟೆ ಸ್ವಾಮಿಯವರು ಅರಶಿನಕೆರೆಯಲ್ಲಿ ನೆಲೆ ನಿಂತರು.
ಹಿಂದಿದ್ದ ರಾಜರು ಕ್ರಿಸ್ತುವ ಮಿಷನರಿ ಗುರುಗಳಿಗೆ ಕೊಟ್ಟಿದ್ದ ಉಂಬಳಿ ಗ್ರಾಮವೇ ಅರಶಿನಕೆರೆ.
ಸ್ವಾಮಿಯವರ ದಾನ ಧರ್ಮಗಳೂ, ದೀನ ದರಿದ್ರರ ಮೇಲೆ ಅವರು ತೋರುತ್ತಿದ್ದ ಅನುಕಂಪವೂ, ಮರಣಾವಸ್ಥೆಯಲ್ಲಿರುವವರ ಬಗ್ಗೆ ತೋರುತ್ತಿದ್ದ ಕಾಳಜಿಯೂ ಇತರ ಧರ್ಮೀಯರಲ್ಲಿ ಬೆರಗು ಮೂಡಿಸಿದ್ದವು. ಸ್ವಾಮಿಯವರಿಗೆ ಬಿಡುವೆಂಬುದೇ ಇರುತ್ತಿರಲಿಲ್ಲ. ಆದರೂ ಬಿಡುವು ಮಾಡಿಕೊಂಡು ಗ್ರಂಥಗಳನ್ನು ಓದುತ್ತಿದ್ದರು. ಅನೇಕ ಭಾಷೆಗಳನ್ನು ಅವರು ಕರಗತ ಮಾಡಿಕೊಂಡರು. ದೇಶೀ ತಾಳೆಗರಿಗಳನ್ನು ಓದುತ್ತಾ ತಮ್ಮ ವಾಗ್ಝರಿಯನ್ನು ಸರಾಗ ಮಾಡಿಕೊಂಡರು. ನೆಲದ ಆಚಾರ ವಿಚಾರ ಸಂಪ್ರದಾಯಗಳನ್ನು ಅರ್ಥ ಮಾಡಿಕೊಂಡರು. ಮಳೆಗಾಲ, ಬೆಳೆಪದ್ಧತಿ, ಋತುಮಾನ, ಹೂವುಹಣ್ಣು, ಆಹಾರಪದ್ಧತಿ, ಬಟ್ಟೆಬರೆಗಳ ಬಗ್ಗೆ ಆಳವಾಗಿ ತಿಳಿದುಕೊಂಡರು. ಸ್ವಲ್ಪ ಅನ್ನ, ಸ್ವಲ್ಪ ಮೊಸರು ಹಾಗೂ ಕೆಂಡದ ಮೇಲೆ ಸುಟ್ಟ ರೊಟ್ಟಿ ಇವಿಷ್ಟೇ ಅವರ ಊಟವಾಯಿತು. ಎಂಥ ಚಳಿಗಾಲದಲ್ಲೂ ಅವರು ತಣ್ಣೀರು ಸ್ನಾನವನ್ನೇ ಮಾಡುತ್ತಿದ್ದರು. ಹೀಗೆ ತಮ್ಮ ಸರಳ ನಡವಳಿಕೆಯಿಂದ ಜನಮಾನಸಕ್ಕೆ ಹತ್ತಿರವಾದರು. ಕೆಲವೇ ದಿನಗಳಲ್ಲಿ ಅವರು ಅಲ್ಲೆಲ್ಲ ಅತ್ಯಂತ ಜನಾನುರಾಗಿ ಸ್ವಾಮಿಯವರಾದರು. ಜನರು ಅವರನ್ನು ಗೌರವದಿಂದ ರಾಜೇಂದ್ರ ಸ್ವಾಮಿಗಳು ಎಂದು ಕರೆಯುತ್ತಿದ್ದರು. ಸ್ವಾಮಿಯವರ ಪ್ರಯತ್ನದ ಫಲವಾಗಿ ಹಲವರು ಮನತಿರುಗಿ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡರು. ಆ ಒಂದೇ ವರ್ಷದಲ್ಲಿ ೧೪೮೧ ಮಂದಿ ಅವರ ಬಳಿ ಪಾಪನಿವೇದನೆ ಮಾಡಿ ಪುನೀತರಾದರು ಎಂದು ಜೆಸ್ವಿತ್ ವಾರ್ಷಿಕ ವರದಿಗಳಲ್ಲಿ ದಾಖಲಾಗಿದೆ.
ಘಟನೆ - ೧
ಈ ನಡುವೆ ಕೂಟಗಲ್ಲು (ಇಂದಿನ ರಾಮನಗರ) ಗೆ ತೆರಳಿದ ಪ್ಲಾಟೆ ಸ್ವಾಮಿಯವರು ಕೆಲಕಾಲ ಅಲ್ಲಿ ತಂಗಿ, ಅಲ್ಲಿನ ಜನರಿಗೆ ಭಾನುವಾರದ ಮಹತ್ವದ ಬಗ್ಗೆ ಅರಿವು ಮೂಡಿಸಿದರಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದರು.
ಮಗ್ಗೆ ಮತ್ತು ಹಾಸನಗಳ ಜನ ಧಾರ್ಮಿಕ ಕರ್ತವ್ಯಗಳಿಂದ ವಿಮುಖರಾಗಿದ್ದುದನ್ನು ಅರಿತು ೧೭೧೦ರಲ್ಲಿ ಅವರು ಆ ಊರುಗಳಿಗೆ ಭೇಟಿ ನೀಡಿದರು. ಆ ಜನರನ್ನೆಲ್ಲ ಮತ್ತೆ ಕ್ರಿಸ್ತೀಯ ನಡವಳಿಕೆಗೆ ಮರಳಿ ಕರೆತರಬೇಕಿತ್ತು. ಗಾಡೇನಹಳ್ಳಿಯ ಸ್ಥಿತಿಯಂತೂ ಇನ್ನೂ ಅಧ್ವಾನವಾಗಿತ್ತು. ಹಳ್ಳಿಯ ಗೌಡನು ದೇವರನ್ನು ಮರೆತು ಸಂಪತ್ತಿನ ಶೇಖರಣೆಯಲ್ಲಿ ತಲ್ಲೀನನಾಗಿದ್ದನು. ತನ್ನ ಹೆಂಡತಿ ಮಕ್ಕಳಿಗೆ ಅವನು ಕ್ರಿಸ್ತದೀಕ್ಷಾಸ್ನಾನ ಕೊಡಿಸಿರಲಿಲ್ಲ. ಅವರೆಲ್ಲ ಕ್ರೈಸ್ತರಾದರೆ ಪೂರ್ವಾಶ್ರಮದ ವ್ರತ ನೇಮ ನೋಂಪಿ ಹುಣ್ಣಿಮೆ ಅಮಾವಾಸ್ಯೆ ಹಬ್ಬ ಹರಿದಿನ ಮುಂತಾದ ರಿವಾಜುಗಳನ್ನು ಮಾಡಲು ಮೈಲಿಗೆಯಾಗುತ್ತದೆಂಬುದು ಅವನ ಭಾವನೆಯಾಗಿತ್ತು. ಪ್ಲಾಟೆ ಸ್ವಾಮಿಯವರು ತಮ್ಮ ಉದಾತ್ತ ವ್ಯಕ್ತಿತ್ವದಿಂದ ಅವರನ್ನೆಲ್ಲ ಸರಿದಾರಿಗೆ ತಂದರು.
ಘಟನೆ - ೨
ಅಲ್ಲಿಂದ ಹಾರೋಬೆಲೆಗೆ ಹೊರಟ ಸ್ವಾಮಿಗಳು ಗೊಲ್ಲನೊಬ್ಬ ಬಡ್ಡಿ ವ್ಯವಹಾರ ನಡೆಸುತ್ತಾ ಅಮಾಯಕ ಜನರನ್ನು ವಿಪರೀತವಾಗಿ ಹಿಂಸಿಸುತ್ತಿದ್ದುದನ್ನು ಕಂಡು ಅವನ ಮನತಿರುಗಿಸಿದರು. ಕ್ರಿಸ್ತುವ ಹೆಂಗಸೊಬ್ಬಳ ನಡವಳಿಕೆ ಮತ್ತು ಜೀವನಶೈಲಿಗಳಿಂದ ಪ್ರಭಾವಿತಳಾಗಿದ್ದ ಒಬ್ಬ ಗೊಲ್ಲ ವಿಧವೆಯು ಮಾನಸಾಂತರ ಹೊಂದಿ ತಾನೂ ಕ್ರಿಸ್ತುವಳಾಗಲು ಬಯಸಿದಳು. ಅದೇ ಕ್ರೈಸ್ತ ಹೆಣ್ಣುಮಗಳಿಂದ ಆಕೆ ಅಲ್ಪಸ್ವಲ್ಪ ಜಪತಪಗಳನ್ನೂ ಕಲಿತಿದ್ದಳು. ಅವರಿಬ್ಬರೂ ಹಬ್ಬದ ಸಂದರ್ಭದಲ್ಲಿ ಅರಶಿನಕೆರೆಗೆ ತೆರಳಿ ದೀಕ್ಷಾಸ್ನಾನ ಸ್ವೀಕರಿಸುವುದೆಂದು ಅಂದುಕೊಂಡಿದ್ದರು. ಆದರೆ ಆ ದಿನ ಹತ್ತಿರವಾದಾಗ ಯಾಕೋ ಆ ಕ್ರೈಸ್ತ ಹೆಂಗಸು ಕಾಣಲೇ ಇಲ್ಲ. ಅವಳಿಗಾಗಿ ಕಾದು ಸೋತ ಗೊಲ್ಲ ವಿಧವೆಯು ತಾನೇ ಅರಶಿನಕೆರೆಯತ್ತ ಪಯಣಿಸಿ ನಡುವೆ ದಾರಿ ತಪ್ಪಿಹೋಗಿ ಊಟ ನೀರಿಲ್ಲದೆ ಪರದಾಡಬೇಕಾಯಿತು. ಹೇಗೋ ದೇವರಕೃಪೆಯಿಂದ ಅವಳು ಅರಶಿನಕೆರೆ ತಲಪಿ ದೀಕ್ಷಾಸ್ನಾನ ಪಡೆದಳು.
ಘಟನೆ - ೩
ಪಕ್ಕದ ಪೆನುಗೊಂಡೆಯ ರಾಜ್ಯದಲ್ಲಿ ಒಂದು ವಿಚಿತ್ರ ವರ್ತಮಾನ ನಡೆದಿತ್ತು. ಅಲ್ಲಿನ ಸೇನಾಪತಿಯೇ ರಾಜನನ್ನು ಸಿಂಹಾಸನದಿಂದ ಕೆಳಗಿಳಿಸಿ ಗಡೀಪಾರು ಮಾಡಿಬಿಟ್ಟಿದ್ದ. ಎಲ್ಲವನ್ನೂ ಕಳೆದುಕೊಂಡ ರಾಜನು ದಿಕ್ಕುದೆಸೆಯಿಲ್ಲದೆ ಅಲೆದಾಡಿ ಮೈಸೂರು ರಾಜಧಾನಿ ಶ್ರೀರಂಗಪಟ್ಟಣ ತಲಪಿದ್ದ. ಆಸ್ಥಾನದಲ್ಲಿದ್ದ ಕ್ರೈಸ್ತ ಅಧಿಕಾರಿಯೊಬ್ಬನು ಆ ಕುಲೀನ ವ್ಯಕ್ತಿಯನ್ನು ಕಂಡು ಆದರಿಸಿ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್ದ. ಅಲ್ಲದೆ ತನ್ನ ರಾಜನೊಡನೆ ಮಾತನಾಡಿ ಕಳೆದುಹೋದ ರಾಜ್ಯವನ್ನು ಮರಳಿ ಪಡೆಯುವ ಬಗ್ಗೆ ನೆರವು ನೀಡುವುದಾಗಿ ಮಾತನಾಡಿದ್ದ. ಅವರಿಬ್ಬರೂ ಒಮ್ಮೆ ಪ್ಲಾಟೆ ಸ್ವಾಮಿಯವರನ್ನು ಭೇಟಿಯಾದರು. ಮೂರು ದಿನಗಳ ಕಾಲ ಆ ರಾಜನಿಗೆ ಬೋಧನೆ ಮಾಡಿದ ಪ್ಲಾಟೆ ಸ್ವಾಮಿಯವರು ಕ್ರಿಸ್ತದೀಕ್ಷೆಯನ್ನು ಕೊಟ್ಟು ಹರಸಿದರು.
ಘಟನೆ - ೪
ಎಂದಿನಂತೆ ಉದಯಕಾಲದ ಪೂಜಾ ಕೈಂಕರ್ಯಗಳಿಗಾಗಿ ನದಿಯತ್ತ ತೆರಳುತ್ತಿದ್ದ ಸಂಪ್ರದಾಯಸ್ಥ ದ್ವಿಜನೊಬ್ಬನು ದಾರಿಯಲ್ಲಿ ಸಿಕ್ಕ ವೃದ್ಧ ಕ್ರೈಸ್ತನೊಬ್ಬನನ್ನು ಮಾತಾಡಿಸುತ್ತಾ ಅವನ ಕೈಯಲ್ಲಿದ್ದ ’ಜಪಸರ’ ವನ್ನು ನೋಡಿ ಅದೇನೆಂದು ಕೇಳಿದ. ಹೀಗೇ ಮಾತಾಡುತ್ತಾ ’ಸರ್ವೇಶ್ವರ ದೇವರು ಅನ್ತೀರಲ್ಲ, ಅವರನ್ನು ಆರಾಧಿಸುವವರು ಇದ್ದಾರೆಯೇ?’ ಎಂದು ಪ್ರಶ್ನಿಸಿದ. ಆದಕ್ಕೆ ಆ ಕ್ರೈಸ್ತನು ಮಗ್ಗೆಗೆ ಹೋದರೆ ಅವರನ್ನು ಆರಾಧಿಸುವ ಹಲವರನ್ನು ಕಾಣಬಹುದು, ಅಲ್ಲದೆ ಆರಾಧನೆಯನ್ನೂ ನೋಡಬಹುದು ಎಂದು ಉತ್ತರಿಸಿದ. ಅದೇ ಮೇರೆಗೆ ಬ್ರಾಹ್ಮಣನು ಮಗ್ಗೆಗೆ ತೆರಳಿ ಕ್ರೈಸ್ತ ದೇವಾಲಯವನ್ನು ದರ್ಶಿಸಿದನಲ್ಲದೆ ಅಲ್ಲಿನ ಗುರುಸ್ವಾಮಿಯವರನ್ನೂ ಮಾತನಾಡಿಸಿ ಬಂದ. ಕೆಲ ತಿಂಗಳ ಆನಂತರ ಆ ಬ್ರಾಹ್ಮಣ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ. ಅವನ ಹತ್ತಿರದವರು ಅವನನ್ನು ಎಷ್ಟು ಹಿಂಸಿಸಿದರೂ ಆತ ಕ್ರೈಸ್ತಧರ್ಮವನ್ನು ಅಚಲವಾಗಿ ಅಪ್ಪಿಕೊಂಡ. ಅಚ್ಚರಿಯೆಂದರೆ ಮೊದಲು ಕಂಡ ಜಪಸರ ಹಿಡಿದಿದ್ದ ಆ ವೃದ್ಧನನ್ನು ಆತ ಮತ್ತೆ ಕಾಣಲೇ ಇಲ್ಲ.
ಘಟನೆ - ೫
ಅದೇ ರೀತಿ ಸಕ್ಕರೆಪಟ್ಟಣದಲ್ಲೂ ಕೆಲವರು ಕ್ರೈಸ್ತಧರ್ಮ ಸ್ವೀಕರಿಸಿದರು. ದೆವ್ವಗಳ ಕಾಟದಿಂದ ಬಸವಳಿದಿದ್ದ ಅವರಿಗೆ ತಾಯಿತದಲ್ಲಿ ಕಟ್ಟಿಕೊಳ್ಳಲು ಫಾದರ್ ಅವರು ಶುಭಸಂದೇಶದ ಕೆಲ ಸಾಲುಗಳನ್ನು ಬರೆದುಕೊಟ್ಟಿದ್ದರು. ಕ್ರೈಸ್ತ ಧರ್ಮವು ಕ್ರಮೇಣ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಕಂಡು ನೆಲದ ಮೂಲಧರ್ಮೀಯರಿಗೆ ಅಸಹನೆಯುಂಟಾಯಿತು. ಅದರಲ್ಲೂ ದಾಸ ಜನಾಂಗದವರು ತುಂಬಾ ರೊಚ್ಚಿಗೆದ್ದರು. ತಮ್ಮ ನಡುವೆಯೇ ಇದ್ದ ಗೆಳೆಯರು ಬಂಧುಬಾಂಧವರು ತಮ್ಮನ್ನು ತೊರೆದು ಅನ್ಯಧರ್ಮವನ್ನು ಸ್ವೀಕರಿಸಿದ್ದು ಅವರಿಗೆ ನುಂಗಲಾರದ ತುತ್ತಾಗಿತ್ತು. ಮಿಷನರಿ ಕೆಲಸಗಳಲ್ಲಿ ತೊಡಗಿದ್ದ ಸ್ವಾಮಿಯವರನ್ನು ನೊಣೆದುಬಿಟ್ಟರೆ ಎಲ್ಲವೂ ಸರಿಹೋಗುತ್ತದೆಂದು ಅವರು ಅಭಿಪ್ರಾಯಪಟ್ಟರು.
ಅಂದು ಮೊಘಲ್ ಸಾಮ್ರಾಜ್ಯಕ್ಕೆ ಸೇರಿದ್ದ ತುಮಕೂರಿನ ಬಳಿ ಅನಂತಪುರ ಜಿಲ್ಲೆಗೆ ಹೊಂದಿಕೊಂಡಿದ್ದ ಕಲಮುಕೋಟ ಎಂಬಲ್ಲಿ ಪ್ಲಾಟೆ ಸ್ವಾಮಿಯವರು ಕೆಲವರಿಗೆ
No comments:
Post a Comment